ಮಡಿಕೇರಿ: ಕೊಡಗಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಗುಡ್ಡ ಕುಸಿತದಲ್ಲಿ ಜೀವಂತ ಸಮಾಧಿಯಾದ ತಲಕಾವೇರಿ ಪುಣ್ಯ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ್ ಅಚಾರ್ ಪುತ್ರಿಯರಿಬ್ಬರು ಹಿಂದೂ ಧರ್ಮ ತೊರೆದು ಕ್ರಿಶ್ಚಿಯನ್ ಧರ್ಮ ಸೇರಿದ್ದಾರೆ. ಇದರಿಂದ ಅವರ ಹೆಸರುಗಳು ಬದಲಾವಣೆಯಾಗಿದ್ದು ರಾಜ್ಯ ಸರ್ಕಾರ ನೀಡುವ ಪರಿಹಾರದ ಹಣ ಪಡೆಯಲು ಪುತ್ರಿಯರಿಬ್ಬರಿಗೆ ತೊಡಕುಂಟಾಗಿದೆ.
ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ದಿವಂಗತ ನಾರಾಯಣಾಚಾರ್ರ ಇಬ್ಬರು ಪುತ್ರಿಯರಿಗೆ ತಲಾ 2.50 ಲಕ್ಷ ರೂ ನಂತೆ ಪರಿಹಾರದ ಚೆಕ್ ವಿತರಿಸಿದ್ದರು. ಆದ್ರೆ ಇದೀಗ ಪರಿಹಾರದ ಚೆಕ್ಅನ್ನು ಭಾಗಮಂಡಲದ ನಾಡ ಕಚೇರಿಗೆ ನಾರಾಯಣ್ ಅಚಾರ್ ಮಕ್ಕಳು ವಾಪಸ್ಸು ಮಾಡಿದ್ದಾರೆ. ನಾವು ಮತಾಂತರಗೊಂಡು ಹೆಸರು ಬದಲಾಯಿಸಿಕೊಂಡಿದ್ದೇವೆ ಹೀಗಾಗಿ ಚೆಕ್ ನಲ್ಲಿರೋ ಹೆಸರನ್ನ ಬದಲಾಯಿಸಿಕೊಡಬೇಕೆಂದು ಕೋರಿದ್ದಾರೆ. ಶೆನೋನ್ ಫರ್ನಾಂಡೀಸ್ (ಶಾರದಾ ಅಚರ್), ನಮಿತಾ ನಜೇರತ್ ಎಂಬ ಹೆಸರಿಗೆ ಚೆಕ್ ನೀಡಬೇಕು ಎಂದು ನಾರಾಯಣಾಚಾರ್ ಪುತ್ರಿಯರು ಕೋರಿದ್ದಾರೆ.

ಅಗಸ್ಟ್ 5 ರಂದು ಬ್ರಹ್ಮಗಿರಿ ಬೆಟ್ಟದ ಸಾಲಿನ ಗಜಗಿರಿ ಬೆಟ್ಟ ಕುಸಿದು ನಾರಾಯಣಾಚಾರ್, ಶಾಂತ ಅಚಾರ್, ಆನಂದ ತೀರ್ಥ ಸ್ವಾಮಿಜಿ, ಶ್ರೀನಿವಾಸ್, ರವಿ ಕಿರಣ್ ಭೂ ಸಮಾಧಿಯಾಗಿದ್ದರು. ಈ ಪೈಕಿ ಇದುವರೆಗೂ ಶಾಂತ ಅಚಾರ್ ಮತ್ತು ಶ್ರೀನಿವಾಸ್ ಭಟ್ ಅವರ ಮೃತ ದೇಹಗಳು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇನ್ನು ಘಟನೆ ಬಳಿಕ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶದಲ್ಲಿ ನೆಲೆಸಿದ್ದ ನಾರಾಯಣಾಚಾರ್ರ ಇಬ್ಬರು ಪುತ್ರಿಯರು ತಮ್ಮ ತಂದೆ ಹಾಗೂ ಕುಟುಂಬ ಸದಸ್ಯರು ನಾಪತ್ತೆಯಾಗಿರುವ ಬಗ್ಗೆ ಭಾಗಮಂಡಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ನೀಡುವ ಸಂದರ್ಭದಲ್ಲಿ ನರಾಯಣಾಚಾರ್ ಪುತ್ರಿಯರಿಬ್ಬರೂ ತಮ್ಮನ್ನು ಶಾರದ ಅಚಾರ್ ಮತ್ತು ನಮಿತಾ ಅಚಾರ್ ಎಂದು ಹೆಸರು ಉಲ್ಲೇಖ ಮಾಡಿದ್ರು. ಈ ಆಧಾರದ ಮೇಲೆ ಮೇಲೆ ರಾಜ್ಯ ಸರ್ಕಾರ ಪರಿಹಾರ ಹಣವನ್ನು ನಮಿತಾ ಶಾರದಾ ಅಚಾರ್ ಎಂದು ಹೆಸರು ಉಲ್ಲೇಖ ಚೆಕ್ ನೀಡಲಾಗಿತ್ತು. ಸದ್ಯ ನಾವು ಮತಾಂತರಗೊಂಡಿರೋದ್ರಿಂದ ಹೆಸರು ಬದಲಾಗಿದೆ. ಚೆಕ್ನಲ್ಲಿರೋ ಹೆಸರು ಬದಲಾಯಿಸಿಕೊಡುವಂತೆ ಮನವಿ ಮಾಡಿದ್ದಾರೆ. ಆದ್ರೆ ಮಡಿಕೇರಿ ತಹಶೀಲ್ದಾರ್ ಮಹೇಶ್ ಚೆಕ್ ತಡೆಹಿಡಿದಿದ್ದಾರೆ. ಹೆಸರು ಬದಲಾವಣೆ ಮಾಡಿಕೊಂಡಿರೋದಕ್ಕೆ ಸಮರ್ಪಕವಾದ ಹಾಗೂ ಸೂಕ್ತವಾದ ದಾಖಲೆಗಳನ್ನು ನೀಡಿ ಪರಿಹಾರದ ಹಣ ಪಡೆದುಕೊಳ್ಳುವಂತೆ ಆದೇಶಿಸಿದ್ದಾರೆ.